Slide
Slide
Slide
previous arrow
next arrow

ಸರಳತೆಯಿಂದ ಮತಯಾಚನೆಗೆ ಮಾಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ

300x250 AD

ಕುಮಟಾ: ರಾಜ್ಯದಲ್ಲಿ ವಿಧಾನಸಭಾ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರವಾದ ಕುಮಟಾದಲ್ಲಿ ಸದ್ಯ ಕಾಂಗ್ರೆಸ್ ಅಭ್ಯರ್ಥಿ ನಿವೇದಿತ್ ಆಳ್ವಾ ಸರಳತೆಯ ಮೂಲಕವೇ ಕ್ಷೇತ್ರದಲ್ಲಿ ಸದ್ದು ಮಾಡಲು ಪ್ರಾರಂಭ ಮಾಡಿದ್ದಾರೆ.
ಕುಮಟಾ ಕ್ಷೇತ್ರ ಈ ಬಾರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸದ್ದನ್ನ ಮಾಡಿದ ಕ್ಷೇತ್ರವಾಗಿದೆ. ಇನ್ನು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ಗಾಗಿ ನಾಯಕರುಗಳು ಸಾಕಷ್ಟು ಪ್ರಯತ್ನ ನಡೆಸಿದ್ದರು. ಟಿಕೇಟ್ ಗಾಗಿ 14 ಜನ ಅರ್ಜಿ ಹಾಕಿದ್ದು ಟಿಕೇಟ್ ಪಡೆಯಲೇಬೇಕು ಎಂದು ಸಾಕಷ್ಟು ಕಸರತ್ತನ್ನ ಸಹ ಮಾಡಿದ್ದರು. ಇದರ ನಡುವೆ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಪುತ್ರ ನಿವೇದಿತ್ ಆಳ್ವಾ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದರು. ನಿವೇದಿತ್ ಆಳ್ವಾ ಶಿರಸಿ-ಸಿದ್ದಾಪುರ ಕ್ಷೇತ್ರದಲ್ಲಿ ಟಿಕೇಟ್ ಗಾಗಿ ಪ್ರಯತ್ನ ನಡೆಸಿದ್ದು ಕಳೆದ ಹಲವು ವರ್ಷದಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸವನ್ನ ಸಹ ಮಾಡಿದ್ದರು. ಅಂತಿಮವಾಗಿ ಶಿರಸಿ ಕ್ಷೇತ್ರವನ್ನ ಬಿಟ್ಟು ಕುಮಟಾದತ್ತ ಬಂದ ಹಿನ್ನಲೆಯಲ್ಲಿ ಪಕ್ಷದ ಒಳಗೆ ಸಾಕಷ್ಟು ವಿರೋಧ ಸಹ ವ್ಯಕ್ತವಾಗಿತ್ತು. ಸದ್ಯ ಮಾಜಿ ಶಾಸಕಿ ಶಾರದಾ ಶೆಟ್ಟಿ, ಹಾಗೂ ಶಿವಾನಂದ ಹೆಗಡೆ ಕಡತೋಕ ಹೊರತಾಗಿ ಉಳಿದೆಲ್ಲಾ ನಾಯಕರು ನಿವೇದಿತ್ ಪರ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ.
ಇನ್ನು ನಿವೇದಿತ್ ಆಳ್ವಾ ಕ್ಷೇತ್ರಕ್ಕೆ ಪರಿಚಯವೇ ಇಲ್ಲದವರಾಗಿದ್ದು, ಪಕ್ಷಕ್ಕೆ ಇದು ಹಿನ್ನಡೆಯಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಇದನ್ನ ತೊಡೆತಟ್ಟಿ ನಿಂತಿರುವ ನಿವೇದಿತ್ ಆಳ್ವಾ ಸದ್ದಿಲ್ಲದೇ ಕ್ಷೇತ್ರದಲ್ಲಿ ತಮ್ಮ ಪ್ರಚಾರ ಕಾರ್ಯವನ್ನ ಚುರುಕುಗೊಳಿಸಿದ್ದಾರೆ. ಹಳ್ಳಿ ಹಳ್ಳಿಗೆ ತೆರಳಿ ಜನರು ಬಳಿ ಮತಯಾಚನೆ ಮಾಡುತ್ತಿದ್ದಾರೆ. ಪ್ರಚಾರಕ್ಕೆ ಹೋದ ಕಡೆ ಎಲ್ಲವೂ ಸರಳತೆ ತೋರುತ್ತಿರುವುದು ಕ್ಷೇತ್ರದಲ್ಲಿನ ಮತದಾರರ ಆಕರ್ಷಣೆಗೆ ಕಾರಣವಾಗುತ್ತಿದೆ. ಪ್ರತಿಯೊಬ್ಬರಿಗೂ ಆತ್ಮೀಯವಾಗಿ ಮಾತನಾಡಿಸಿ ಎಲ್ಲರ ಅಭಿಪ್ರಾಯ ಕೇಳಿ ಪ್ರಚಾರ ನಡೆಸುತ್ತಿರುವ ಪರಿಗೆ ಜನರು ಸಹ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ನಿವೇದಿತ್ ಪರ ಮತದಾರರಲ್ಲಿ ಪಾಸಿಟಿವ್ ಆಗಿ ನೋಡುವಂತಾಗಿದ್ದು ಜನರು ಹೊಸ ಬದಲಾವಣೆ ಬಯಸಿದರೆ ನಿವೇದಿತ್ ಪರ ಒಲಿಯುವ ಸಾಧ್ಯತೆ ಹೆಚ್ಚಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.
ನಿವೇದಿತ್ ಎಂಟ್ರಿಯಾದ ನಂತರ ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನಡೆಯಾಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ನಾಮಪತ್ರ ಸಲ್ಲಿಕೆಯ ನಂತರ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ನಿವೇದಿತ್ ಆಳ್ವಾ ತೊಡಗಿದ್ದು ಸದ್ಯ ಕ್ಷೇತ್ರದಲ್ಲಿ ಚುನಾವಣಾ ಚಿತ್ರಣವೇ ಬದಲಾಗುತ್ತಿದ್ದು ಈ ಬಾರಿ ಹೊಸ ಮುಖಕ್ಕೆ ಆದ್ಯತೆ ಕೊಡಲು ಮತದಾರರು ಬಯಸಿದರೆ ನಿವೇದಿತ್ ಗೆ ಲಾಭವಾಗಬಹುದು ಎನ್ನುವ ಲೆಕ್ಕಾಚಾರ ಸ್ಥಳೀಯರದ್ದಾಗಿದೆ.

ನಿವೇದಿತ್ ಆಳ್ವಾ ಬಂಡಾಯವಾಗಿದ್ದ ತಮ್ಮ ಪಕ್ಷದ ಎಲ್ಲಾ ನಾಯಕರನ್ನ ಮನವೊಲಿಸುವ ಕಾರ್ಯದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಈಗಾಗಲೇ ಟಿಕೇಟ್‌ಗಾಗಿ ಹೆಚ್ಚು ಪೈಪೋಟಿ ನಡೆಸಿದ್ದ ಮಂಜುನಾಥ್ ನಾಯ್ಕ ನಿವೇದಿತ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಇನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರತ್ನಾಕರ ನಾಯ್ಕ, ಪ್ರದೀಪ್ ನಾಯಕ ಸಹ ಬೆಂಬಲಕ್ಕೆ ನಿಂತಿದ್ದಾರೆ. ಇದಲ್ಲದೇ ಯಶೋಧರ್ ನಾಯ್ಕ ಒಂದೆಡೆ ಬೆಂಬಲಿಸಿದರೆ ಇನ್ನೊಂದೆಡೆ ಒಕ್ಕಲಿಗ ಸಮುದಾಯದ ಕೃಷ್ಣಗೌಡ ಹಾಗೂ ಭಾಸ್ಕರ್ ಪಟಗಾರ್ ನಿವೇದಿತ್ ಪರ ನಿಂತಿದ್ದಾರೆ.
ಇನ್ನು ಯುವ ಮುಖಂಡ ಭುವನ್ ಭಾಗ್ವತ್, ಧೀರೂ ಶ್ಯಾನಭಾಗ್ ಸೇರಿದಂತೆ ಎಲ್ಲರೂ ನಿವೇದಿತ್ ಪರ ಕಾರ್ಯಮಾಡುವ ಮೂಲಕ ಒಗ್ಗಟ್ಟಿನಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ಸದ್ಯ ಶಿವಾನಂದ ಹೆಗಡೆ ಕಡತೋಕ ಹಾಗೂ ಶಾರದಾ ಶೆಟ್ಟಿ ಮಾತ್ರ ಅಸಮಾಧಾನ ಗೊಂಡಿದ್ದು ಅವರನ್ನ ಸಹ ಮನವೊಲಿಸುವ ಕಾರ್ಯ ಮಾಡಲಾಗುವುದು ಎಂದು ಸ್ವತಹ ನಿವೇದಿತ್ ಆಳ್ವಾ ಅವರೇ ತಿಳಿಸಿದ್ದು ನಾಯಕರುಗಳ ಒಗ್ಗಟ್ಟಿನ ಕೆಲಸ ನಿವೇದಿತ್ ಗೆ ಎಷ್ಟರ ಮಟ್ಟಿಗೆ ಲಾಭವಾಗಲಿದೆ ಎನ್ನುವುದನ್ನ ಕಾದು ನೋಡಬೇಕಾಗಿದೆ.

300x250 AD
Share This
300x250 AD
300x250 AD
300x250 AD
Back to top